ಎಫ್​ಐಆರ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆ ಶಿ

ಬೆಂಗಳೂರು ಮತದಾರರಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡ್ಡಿರುವ ಆರೋಪದಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿರುವುದನ್ನು ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್

ಮಂಗಳವಾರ ಹೈಕೋರ್ಟ್  ಮೆಟ್ಟಿಲೇರಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ರಾಜರಾಜೇಶ್ವರಿ ನಗರದ ಅಪಾರ್ಟ್​ಮೆಂಟೊಂದರಲ್ಲಿ ಮತಯಾಚನೆ ಮಾಡಿದ್ದ ಡಿಕೆ ಶಿವಕುಮಾರ್ ಮತದಾರರಿಗೆ ಬೆದರಿಕೆ ಹಾಕಿ ಅವರನ್ನು ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿತ್ತು. ನಂತರ ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಡಿಕೆ ಶಿವಕುಮಾರ್ ವಿರುದ್ಧ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.

ಹಕ್ಕುಪತ್ರ, ಕಾವೇರಿ ನೀರು ಬೇಕಿದ್ದರೆ ನಮಗೆ ಮತ ನೀಡಿ ಎಂದಿದ್ದ ಡಿಕೆಶಿ

ರಾಜರಾಜೇಶ್ವರಿ ನಗರದ ಅಪಾರ್ಟ್​ಮೆಂಟೊಂದರಲ್ಲಿ ಮತಯಾಚನೆ ಮಾಡಲು ತೆರಳಿದ್ದ ಡಿಕೆ ಶಿವಕುಮಾರ್, ನಾನು ಇಲ್ಲಿಗೆ ಬ್ಯುಸಿನೆಸ್ ಡೀಲ್​ ಮಾಡಲು ಬಂದಿದ್ದೇನೆ. ನಿಮಗೆ ಅಪಾರ್ಟ್​​ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಆಮಿಷವೊಡ್ಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು.

ಕಾವೇರಿ ನೀರು ಸಂಪರ್ಕ ದೊರೆಯದಿರುವುದು ನಿಮ್ಮ ಇನ್ನೊಂದು ಸಮಸ್ಯೆ. ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರೆ ನೀವೇನು ಕೊಡುತ್ತೀರಿ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಆಡಳಿತ, ಜಲ ಸಂಪನ್ಮೂಲ ಖಾತೆ ಎಲ್ಲವೂ ನನ್ನ ಕೈಯಲ್ಲೇ ಇದೆ. ಹೀಗಾಗಿ ನಾನೇ ಈ ಕೆಲಸವನ್ನು ನಿಮಗೆ ಮಾಡಿಕೊಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಮತದಾರರನ್ನು ಉದ್ದೇಶಿಸಿ ಹೇಳಿರುವುದು ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿತ್ತು.

LEAVE A REPLY

Please enter your comment!
Please enter your name here