ದಾವಣಗೆರೆ : ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ, ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಮಾನ ಮರ್ಯಾದೆ ತೆಗೆದಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಾನೂ ಅವರಂತೆ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಬೇಕಾ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ ಎಂದು ಹೇಳಿದ್ದಾರೆ.
ಇದುವರೆಗೂ ಕೆಂದ್ರ ಸರ್ಕಾರದಿಂದ ಒಂದೇ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ರಾಜ್ಯ ಬಿಜೆಪಿ ಲೀಡರ್ಗಳು ಅಮಿತ್ ಶಾ ಜೊತೆ ಮಾತನಾಡಿ ಅನುದಾನ ಬಿಡುಗಡೆ ಮಾಡಿಸಿಲ್ಲ. ಯಡಿಯೂರಪ್ಪ, ಆಶೋಕ್, ಬೊಮ್ಮಾಯಿ, ವಿಜಯೇಂದ್ರ ಈಗಲಾದ್ರೂ ಹೋಗಿ ಕೇಳಲಿ ಎಂದಿರುವ ಸಿಎಂ, ನಮಗೆ ಅನ್ಯಾಯ ಆದ್ರೆ ಪ್ರತಿಭಟಿಸಬಾರದಾ? ಯಡಿಯೂರಪ್ಪ ಅವರಂತೆ ಬಾಯಿ ಮುಚ್ಚಿಕೊಂಡು ಇರಬೇಕಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಿಂದ 100 ರೂಪಾಯಿ ತೆರಿಗೆ ನೀಡಿದ್ರೆ ನಮಗೆ ಬರೋದು 12 ರೂಪಾಯಿ ಮಾತ್ರ. ತೆರಿಗೆ ಕೊಡೋದ್ರಲ್ಲಿ ದೇಶದಲ್ಲೇ ನಾವು 2ನೇ ಸ್ಥಾನದಲ್ಲಿದ್ದೇವೆ. ಆದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಬರವನ್ನ ನಾವು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಲ್ಲ. ಇದರೊಂದಿಗೆ ಜಾನುವಾರುಗಳಿಗೆ ಮೇವು ಸಿಗುವ ವ್ಯವಸ್ಥೆ ಮಾಡಿದ್ದೇವೆ. ಜನರಿಗೆ ಉದ್ಯೋಗ ಕೊಡ್ತಾ ಇದೀವಿ, ಅದಕ್ಕಾಗಿ 850 ಕೋಟಿ ರೂ. ನಿಧಿ ಇಡಲಾಗಿದೆ. ಯಾರೂ ಸಹ ಗುಳೆ ಹೋಗದ ರೀತಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.