ಜೈ ಶ್ರೀರಾಮ್ ಬಿಜೆಪಿ ಆಸ್ತಿಯಲ್ಲ – ಸಿಎಂ ಸಿದ್ದರಾಮಯ್ಯ

ಮೈಸೂರು : ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್ ಬಿಜೆಪಿ ಆಸ್ತಿಯಲ್ಲ. ನಾವೂ ಶ್ರೀರಾಮನ ಘೋಷಣೆ ಕೂಗುತ್ತೇವೆ. ನನ್ನ ಹೆಸರಲ್ಲೇ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದಾನೆ. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳುವಂತೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ಮನವಿ ಮಾಡಿದ್ದೆ. ಜಾತ್ಯತೀತ ಪಕ್ಷವು ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದೆ. ಅಧಿಕಾರಕ್ಕೆ ಬಂದು ಎಂಟು ತಿಂಗಳಿನಲ್ಲೇ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಒಂದೇ ವೇದಿಕೆಗೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿ. 23ಕ್ಕೆ ಬರ ಪರಿಹಾರ ಸಭೆ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಜ. 24 ಆದರೂ ಮೀಟಿಂಗ್ ಮಾಡಿಲ್ಲ. ಬಿಜೆಪಿಗೆ ರೈತರ ಪರ ಕಾಳಜಿ ಇಲ್ಲ. ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದೇ ಮಾತನಾಡಿದ್ದು. ಕೇಂದ್ರಕ್ಕೆ ಬರ ಪರಿಹಾರಕ್ಕೆ ಮನವಿ ನೀಡಿ ಮೂರ್ನಾಲ್ಕು ತಿಂಗಳಾಯಿತು. ಪ್ರತಾಪ್ ಸಿಂಹ ನಾಚಿಗೆ ಮಾನ ಮರ್ಯಾದೆ ಇಲ್ಲ. ಪ್ರಧಾನಿಯನ್ನು ಭೇಟಿ ಮಾಡಿದ್ದಾಗಲೂ ನೆನಪಿಸಿದ್ದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರೈತರ ಮಗನಂತೆ. ಹಾಗಾದರೆ ನಾನು ಯಾರ ಮಗ? ರೈತನ ಮಗನಲ್ವಾ ಎಂದು ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿ ಹೇಳುವ ರಾಮನನ್ನು ನಾವು ಪೂಜಿಸುವುದು. ಪಿತೃ ವಾಕ್ಯ ಪರಿಪಾಲನೆ ಮಾಡಿದ ರಾಮನನ್ನು ಪೂಜಿಸುತ್ತೇವೆ. ರಾಮನ ಬಗ್ಗೆ ಮಾತನಾಡದಿದ್ದರೆ ಹಿಂದೂ ವಿರೋಧಿ ಅಂತಾರೆ. ರಾಮನ ಬಗ್ಗೆ ಮಾತನಾಡಿದರೆ ಈಗ ಬುದ್ಧಿ ಬಂತಲ್ಲಾ ಅಂತಾರೆ. ಮಿಸ್ಟರ್ ನರೇಂದ್ರ ಮೋದಿ ನಮ್ಮ ಜನ ದಡ್ಡರಲ್ಲ. ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ, ಗೊಬ್ಬರ ಬೆಲೆ ಜಾಸ್ತಿಯಾಗಿದೆ. ಇದು ದೇಶಕ್ಕೆ ಬಿಜೆಪಿ ಕೊಡುಗೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here